ಪ್ರಜೋದಯ ಪ್ರಕಾಶನದಿಂದ ಪ್ರಕಟವಾಗಿರುವ ನಾಲ್ಕು ಪುಸ್ತಕಗಳ ಸೆಟ್ ಇದು.
1232 ಕಿ.ಮೀ.: ಮನೆ ಸೇರಲು ಸಾಗಿದ ದೂರ (ಅನುಭವ ಕಥನ) ಕೊರೊನಾ ಹರಡದಂತೆ 2020ರಲ್ಲಿ ಹೇರಲಾದ ದೇಶವ್ಯಾಪಿ ಲಾಕ್ಡೌನ್ ವೇಳೆ ಏಳು ಮಂದಿ ವಲಸೆ ಕಾರ್ಮಿಕರು ತಮ್ಮ ಮನೆಗೆ ಮರಳಲು ನಡೆಸಿದ ಸೈಕಲ್ ಪ್ರಯಾಣದ ವೇಳೆ ಅನುಭವಿಸಿದ ಸವಾಲುಗಳನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ ವಿನೋದ್ ಕಾಪ್ರಿ ತಮ್ಮ '1232 km: The Long Journey Home' ಕೃತಿಯಲ್ಲಿ ಕಟ್ಟಿಕೊಟ್ಟಿದ್ದರು. ಈ ಪುಸ್ತಕವನ್ನು ಪತ್ರಕರ್ತ ಸತೀಶ್ ಜಿ. ಟಿ. ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಒಡಲ ಖಾಲಿ ಪುಟ (ಲೇಖನಗಳು), ಎಸ್.ಎಸ್.ಕಾವೇರಿ ಏಕಕಾಲಕ್ಕೆ ನಗು ಮತ್ತು ವಿಷಾದ ಎರಡನ್ನೂ ದಾಟಿಸಬಲ್ಲ ಕಸುವು ಇಲ್ಲಿನ ಬರಹಗಳಲ್ಲಿದೆ. ಅಂಗನವಾಡಿ, ಸರ್ಕಾರಿ ಶಾಲೆಯಲ್ಲಿ ಅಕ್ಷರ ಜ್ಞಾನ ದಕ್ಕಿಸಿಕೊಳ್ಳುವ ಮಕ್ಕಳ ಭಾವಲೋಕವನ್ನು ಇಲ್ಲಿನ ಕೆಲ ಪ್ರಬಂಧಗಳಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಇಲ್ಲಗಳ ನಡುವೆಯೂ ಸಂಭ್ರಮಿಸುವ ಬದುಕಿನ ಚಿತ್ರಗಳು ಆಪ್ತವಾಗಿವೆ. ಮೀಸಲಾತಿ, ಮುಟ್ಟು-ಮೈಲಿಗೆ, ಶಿಕ್ಷಣ, ಕೃಷಿ, ಮಾಧ್ಯಮ ಮತ್ತು ಮಹಿಳೆ ಕುರಿತ ಲೇಖನಗಳೂ ಇವೆ.
ಮೊದಲ ತೊದಲು (ಲೇಖನಗಳು), ಶರತ್ ಎಚ್ ಕೆ ಹರೆಯದ ಹುಡುಗನ ಮನದೊಳಗೆ ಮೂಡಬಹುದಾದ ಚಡಪಡಿಕೆಗಳೆಲ್ಲವೂ ಇಲ್ಲಿ ಅಕ್ಷರದ ರೂಪ ತಾಳಿವೆ. ಬಾಲ್ಯದ ನೆನಪು, ಪ್ರೀತಿಯ ಕನವರಿಕೆ, ಕಾಲೇಜು ದಿನಗಳ ತುಂಟಾಟ, ವರ್ತಮಾನದ ವಿದ್ಯಮಾನಗಳಿಗೆ ತನ್ನದೇ ಮಿತಿಯಲ್ಲಿ ಪ್ರತಿಕ್ರಿಯಿಸಲು ಹೊರಟವನ ನವನವೀನ ವಿಚಾರಲಹರಿ ಇವುಗಳನ್ನೆಲ್ಲ ಒಳಗೊಂಡಿರುವ ವ್ಯೆವಿಧ್ಯಮಯ ಬರಹಗಳ ಗುಚ್ಛವೇ 'ಮೊದಲ ತೊದಲು'.
ಕರಗದ ನಗು (ಕಥಾ ಸಂಕಲನ), ಎಸ್.ಎಸ್.ಕಾವೇರಿ ಹನ್ನೆರಡು ಕಥೆಗಳಿರುವ ಸಂಕಲನ.